ಶೀರ್ಷಿಕೆಗಳು

Wednesday, September 17, 2008

ವಿಪತ್ತಿನ ಮುನ್ನುಡಿ

ಕತ್ತಲೆಯಿದ್ದಲ್ಲಿ ತಾನೆ ಬೇಕು ಬೆಳಕು? ಮುಂದಿನ ಇಡೀ ಹದಿನೆಂಟು ಅಧ್ಯಾಯದಲ್ಲಿ ಶ್ರೀ ಕೃಷ್ಣ ಬೆಳಗುವ ಗೀತೆಯ ಬೆಳಕಿಗೆ ವಿಷಾದದ ಮುನ್ನೆಲೆ ಬಹಳ ಔಚಿತ್ಯಪೂರ್ಣವಾಗಿದೆ. ಇದು ನಾವು ಕಾಣುವಂತೆ ಕೇವಲ ಅರ್ಜುನನ ವಿಷಾದವಲ್ಲ, ದುರ್ಯೋಧನನ ವಿಷಾದ, ಭೀಷ್ಮರ ವಿಷಾದ, ಅವತ್ತು ಕುರುಕ್ಷೇತ್ರದಲ್ಲಿ ನೆರೆದಿರುವ ಇಡೀ ಹದಿನೆಂಟು ಅಕ್ಷೋಹಿಣಿ ಸೈನ್ಯದ ವಿಷಾದ ಕೂಡ.

ಇಡೀ ಭಗವದ್ಗೀತೆ ಹೇಳಲ್ಪಡುವುದೇ ಕುರುಡನಾದ ಧೃತರಾಷ್ಟ್ರನಿಗೆ, ಸಂಜಯನಿಂದ. ಅಲ್ಲಿಂದ ಆರಂಭವಾಗುವ ವಿಷಾದ ದುರ್ಯೋಧನನಲ್ಲಿ ಮುಂದುವರೆಯುತ್ತದೆ. ದುರ್ಯೋಧನ ದ್ರೋಣನಿಗೆ ಹೇಳುತ್ತಾನೆ: "ಗುರುಗಳೇ ಪಾಂಡವರ ಕಡೆ ಭೀಮನಿಂದ ರಕ್ಷಿತವಾಗಿರುವ ಸೇನೆಯನ್ನು ನೋಡಿ. ಸಂಖ್ಯಾಬಲದಲ್ಲಿ ನಮಗಿಂತ ಚಿಕ್ಕದಾದರೂ ಅತಿರಥ ಮಹಾರಥರಿಂದ ತುಂಬಿ ಉತ್ಸಾಹಿಯಾಗಿಯೂ ಬಲಶಾಲಿಯಾಗಿಯೂ ಕಾಣುತ್ತಿದೆ. ಆದರೆ ನಮ್ಮ ಕಡೆಯಾದರೋ, ತಾವು, ಭೀಷ್ಮ, ಕರ್ಣನೇ ಮುಂತಾದ, ನನಗೋಸ್ಕರ ಜೀವವನ್ನೇ ತೆರಲು ಸಿದ್ಧರಾದ ಅತಿರಥ ಮಹಾರಥರನ್ನು ಹೊಂದಿದ್ದರೂ ವೃದ್ಧ ಪಿತಾಮಹರಾದ ಭೀಷ್ಮರಿಂದ ಅಭಿರಕ್ಷಿತವಾದ ನಮ್ಮ ಸೇನೆಯು ಉತ್ಸಾಹ-ಬಲಗಳಲ್ಲಿ ಪಾಂಡವ ಸೇನೆಯನ್ನು ಸರಿಗಟ್ಟುವಂತಿಲ್ಲ" ಎನ್ನುತ್ತಾನೆ. ಮುಂದುವರೆದು, ತಾವೆಲ್ಲರೂ ಸುತ್ತುವರೆದು ಪಿತಾಮಹರಾದ ಭೀಷ್ಮರನ್ನೇ ರಕ್ಷಿಸುತ್ತಿರಬೇಕು ಎಂದು ಸೂಕ್ಷ್ಮ ವ್ಯಂಗ್ಯದೊಡಗೂಡಿದ ಆಣತಿಯೀಯುತ್ತಾನೆ. ಸೇನಾಪತಿ ಸೇನೆಯನ್ನು ಮುನ್ನೆಡೆಸಬೇಕು, ಸೇನೆ ಮುನ್ನುಗ್ಗಿ ಯುದ್ಧಮಾಡಬೇಕು - ಸ್ವತಃ ಅಜೇಯ ವೀರನಾದ, ಇಚ್ಛಾಮರಣಿಯಾದ ಭೀಷ್ಮನ ವಿಷಯದಲ್ಲಂತೂ ಇದು ಹೆಚ್ಚು ಪ್ರಸ್ತುತ; ಇಂಥಾ ಮಹಾಸೇನಾಪತಿಯನ್ನು ರಕ್ಷಿಸಿಕೊಳ್ಳಿ ಎಂದು ಸೇನೆಗೆ ನಿಯೋಜಿಸುತ್ತಾನೆ ದುರ್ಯೋಧನ. ಒಬ್ಬ ನಾಯಕನಿಂದ ಹೊಮ್ಮುವ ಈ ಮಾತುಗಳು ಸೇನೆಯ ಮೇಲೆ ಸೇನಾಪತಿಯ ಮೇಲೆ ಉಂಟುಮಾಡುವ de-moralising ಪರಿಣಾಮವನ್ನು ನೋಡಿ.
.
ಧರ್ಮದ ಬಲವಿಲ್ಲ, ಧರ್ಮಪಕ್ಷಪಾತಿಗಳಾಗಿ ಕೇವಲ ಕರ್ಮಮಾತ್ರದಿಂದ ಕೌರವಪಕ್ಷದಲ್ಲಿರುವ ಗುರು-ಹಿರಿಯರ ಬಲ ಮೊದಲೇ ಇಲ್ಲ, ಕೇವಲ ಕರುಬಿನಿಂದ ಒಳಗೇ ತಿಂದುಹೋಗಿರುವ ಕೌರವನಿಗೆ ಆತ್ಮದ ಬಲವೂ ಇಲ್ಲ, ಇರುವ ಬಲದಲ್ಲಿ ನಂಬಿಕೆಯೂ ಇಲ್ಲ. ಅವನ ಒಳಹೊರಗೆ ಕೇವಲ "ಇಲ್ಲ"ದ್ದೇ ರಾಜ್ಯಭಾರ. ಪಾಂಡವರಿಗಾದರೋ ಯುದ್ಧದಿಂದ ಕಳೆದುಕೊಳ್ಳುವುದೇನೂ ಇಲ್ಲ, ಜೀವವೊಂದನ್ನು ಬಿಟ್ಟು. ಆದರೆ ದುರ್ಯೋಧನನಿಗೆ ಕಳೆದುಕೊಳ್ಳಲು ಸರ್ವಸ್ವವೂ ಇದೆ. ಆದ್ದರಿಂದ ಅವರಿಗಿದು ಗೆಲ್ಲಲು ಹೋರಾಟವಾದರೆ, ಇವರಿಗೆ ಸೋಲದಿರಲು ಹೋರಾಟ! ಆದ್ದರಿಂದಲೇ ಪಾಂಡವರಿಗೊಂದು ಗುರಿಯಿದೆ, ಕೌರವನಿಗೆ ಅದಿಲ್ಲ. ಆದ್ದರಿಂದ, ಕೌರವನ ಆಟ ಕೇವಲ defensive ಆಗಿಯೇ ಉಳಿಯುತ್ತದೆ.
.
ಮತ್ತೊಂದನ್ನು ಗಮನಿಸಬೇಕೆಂದರೆ, ಇಡೀ ಭಾರತದಲ್ಲಿ ಪಾಂಡವರು ಐದೂ ಜನ ಒಗ್ಗಟ್ಟಾಗಿ ಪಾಂಡವರೆಂಬ ಬಹುವಚನದಿಂದ ವಿಜೃಂಬಿಸುತ್ತಾರೆ. ಒಬ್ಬ ಹೆಂಡತಿಯನ್ನೂ ಹಂಚಿಕೊಂಡು ಬಾಳುವಷ್ಟು ಅತಿರೇಕದ ಒಗ್ಗಟ್ಟು ಅದು! ಆದರೆ ಕೌರವರ ವಿಷಯಕ್ಕೆ ಬಂದರೆ ಕೌರವರೆಂಬ ಬಹುವಚನದಲ್ಲೂ ಎದ್ದು ಕಾಣುವನು ದುರ್ಯೋಧನನೊಬ್ಬನೇ! ಆಗೀಗ ದುಃಶ್ಶಾಸನ ತನ್ನ ಅಸೀಮ ದುಷ್ಟತನ ದುರಾಚಾರಗಳಿಂದ ಗಮನ ಸೆಳೆಯುತ್ತಾನಾದರೂ ಆ ದುಷ್ಟತನ ಕೂಡ ಕೌರವ ಸಮಷ್ಟಿಯ ಛಾಪನ್ನು ಹೊತ್ತು ನಿಲ್ಲುವುದೇ ಇಲ್ಲ. ಇನ್ನು ಇತರ ಕೌರವರೋ, ನಾಮಮಾತ್ರವಾಗಿ ವ್ಯಾಸಭಾರತದಲ್ಲೆಲ್ಲೋ ಬರುತ್ತಾರಷ್ಟೇ ಹೊರತು ಅವರ ಪಾತ್ರಗಳ ಔಚಿತ್ಯವೇ ತಿಳಿಯುವುದಿಲ್ಲ (ಸಂಖ್ಯಾಬಾಹುಳ್ಯದ ಔಚಿತ್ಯವೊಂದನ್ನು ಹೊರತು). ಅದರಿಂದಲೇ ಪಾಂಡವರು ಒಂದು ಸಮಷ್ಟಿಯಾಗಿ ನಿಂತರೆ, ಕೌರವ ಕೇವಲ ಕೌರವನಾಗಿಯೇ ಉಳಿಯುತ್ತಾನೆ, "ಕೌರವರು" ಎಂಬ ಪದ ಕೇವಲ ಔಪಚಾರಿಕವಾಗಿ ಉಳಿಯುತ್ತದೆ.
.
ಹೀಗೆ ಮೂಲಭೂತವಾಗಿ ಏಕಾಂಗಿಯೇ ಆಗಿ, ತನ್ಮೂಲಕ ದುರ್ಬಲನಾಗಿ ನಿಲ್ಲುವ ದುರ್ಯೋಧನನಿಗೆ, ತನ್ನ ಹನ್ನೊಂದು ಅಕ್ಷೋಹಿಣಿಯ ಬೃಹತ್ ಸೇನೆ ಕೂಡ ಪಾಂಡವ ಸಮಷ್ಠಿ ಬಲದ ಏಳು ಅಕ್ಷೋಹಿಣಿಯ ಮುಂದೆ ತೀರ ದುರ್ಬಲವಾಗಿ ಕಂಡದ್ದು ಸಹಜವೇ.
.
ಹೀಗೆ ವಿಷಣ್ಣ ಮಾನಸನಾಗಿ ನಿರುತ್ಸಾಹವನ್ನು ಬೀರುತ್ತಾ ನಿಂತ ದುರ್ಯೋಧನನಿಗೆ ಉತ್ಸಾಹ ಮೂಡಿಸಲು ರಣ ಶಂಖವನ್ನೂದುತ್ತಾರೆ, ಭೀಷ್ಮರು. ಆದರೇನು, ಒಳಗಿಲ್ಲದ ಉತ್ಸಾಹವನ್ನು ಹೊರಗಿನಿಂದ ತುಂಬಲಾದೀತೇ? ಏರಿ ಬರುತ್ತಿರುವ ಕಾವಳವನ್ನು ತೊಡೆಯಲೆತ್ನಿಸುವ ಮಿಣುಕು ಹಣತೆಯ ಪ್ರಯತ್ನದಂತೆ ನಿಷ್ಫಲಗೊಳ್ಳುತ್ತದೆ, ಭೀಷ್ಮರ ಈ ಪ್ರಯತ್ನ. ಅಷ್ಟೇ ಅಲ್ಲ, ಈ ಶಂಖನಾದಕ್ಕೆ ಉತ್ತರ, ಶ್ರೀ ಕೃಷ್ಣನ ಪಾಂಚಜನ್ಯ. ಅದಕ್ಕನುಗುಣವಾಗಿ ಅರ್ಜುನನು ದೇವದತ್ತವೆಂಬ ಶಂಖವನ್ನೂದಿದರೆ, ಭೀಮನು ಪೌಂಡ್ರಕವೆಂಬ ಮಹಾಶಂಖವನ್ನೂ, ನಕುಲ-ಸಹದೇವರು ಸುಘೋಷ-ಮಣಿಪುಷ್ಪಕಗಳನ್ನೂ, ಯುಧಿಷ್ಟಿರನು ಅನಂತವಿಜಯವನ್ನೂ, ಶಿಖಂಡಿ, ದೃಷ್ಟದ್ಯುಮ್ನ, ವಿರಾಟ ಸಾತ್ಯಕಿಯೇ ಮೊದಲಾದ ಪಾಂಡವ ವೀರರು ತಂತಮ್ಮ ಶಂಖಗಳನ್ನು ಮೇಲಿಂದ ಮೇಲೆ ಊದುತ್ತಾರೆ. ಈ ಎಲ್ಲದರಿಂದ ಉತ್ಪನ್ನವಾದ ಮಹಾಘೋಷ ಭೂಮ್ಯಾಕಾಶಗಳನ್ನು ತುಂಬಿ ಕೌರವರ ಎದೆಯನ್ನು ಒಡೆಯುವಂತೆ ಭೋರ್ಗರೆಯುತ್ತದೆ.
.
ಆ ವ್ಯತ್ಯಾಸ ನೋಡಿ. ಭೀಷ್ಮರು ಶಂಖವನ್ನೂದುತ್ತಾರೆ, ಸೇನೆಯನ್ನು ಹುರಿದುಂಬಿಸಲು ಅಲ್ಲ, ಶತ್ರುವನ್ನು ಎದೆಗೆಡಿಸುವ ಯುದ್ಧತಂತ್ರಕ್ಕಾಗಿಯಲ್ಲ, ಕೇವಲ ದುರ್ಯೋಧನನನ್ನು ಉತ್ಸಾಹಗೊಳಿಸಲು, ಅದಕ್ಕಿಂತ ಹೆಚ್ಚಾಗಿ, ಈಗತಾನೆ ತಾನು ಕೈಲಾಗದ ಮುದುಕನೆಂದು ಚುಚ್ಚಿದನಲ್ಲ, ಅದು ಹಾಗಲ್ಲ ಎಂದು ಅವನಿಗೆ ಹೇಳಲು. ಮತ್ತೆ, defensive ನಡೆ! ಇದಕ್ಕೆ ಪಾಂಡವರ ಉತ್ತರವಾದರೋ, ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ತುಂಬುಗೊರಲಿನ ನಾದ, ಪಾಂಚಜನ್ಯವೇ ಮೊದಲಾದ ಮಹಾಶಂಖಗಳ ನಾದ, ತೊಡೆತಟ್ಟಿ ಕದನಕ್ಕೆ ಆಹ್ವಾನಿಸುವ ರಣೋನ್ಮಾದ! ಮೊದಲೇ ಜರಿದು ಬಿದ್ದ ಕೌರವನ ಎದೆಯೊಡೆಯಲು ಬೇರೇನು ಬೇಕು?
.
ಒಟ್ಟಾರೆ, ಕೌರವರ(ನ) ಹುಟ್ಟಿನಿಂದ ಹಿಡಿದು ಇಂದಿನವರೆಗೆ, ಕೌರವ-ಪಾಂಡವರ ಬದುಕು ರೂಪಿಸುತ್ತಾ, ಕೌರವ ಪಾಂಡವರನ್ನೂ ಒಳಗೊಂಡಂತೆ ಹದಿನೆಂಟು ಅಕ್ಷೋಹಿಣಿಯ ಮಹಾಸೇನೆಯನ್ನು ಇಂದು ಈ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಿಯೋಜಿಸಲು ಕಾರಣವಾದ ಘಟನೆಗಳೆಲ್ಲದರ ಪಡಿನೆಳಲು ಇವತ್ತು ಇಡೀ ಯುದ್ಧಭೂಮಿಯನ್ನು ಆವರಿಸಿದೆ, ಮುಂದಿನ ಮಹಾವಿಪತ್ತಿನ ವಿಷಾದಪೂರ್ಣವಾದ ಮುನ್ನುಡಿಯೆಂಬಂತೆ.

ಗೀತಾಮಂದಿರದ ಹೊಂಬಾಗಿಲಲ್ಲಿ ನಿಂತು...

ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆನ್ನುವ ಬಗ್ಗೆ ನಾನು ಹೇಳದಿದ್ದರೆ ಉತ್ತರ ಬಹು ಸುಲಭ. ಗೀತೆ, ಜೀವನೋಪಯೋಗೀ ವಿಚಾರಗಳ ಗಣಿ; ಅನೇಕ ಗೂಢಾರ್ಥ-ಕೂಟಾರ್ಥಗಳನ್ನುಳ್ಳದ್ದು (ಕಬ್ಬಿಣದ ಕಡಲೆ!); ಬದುಕಿನ ಅನೇಕ ಗೊಂದಲಗಳಿಗೆ ಉತ್ತರ ಇಲ್ಲಿದೆ. ಮತ್ತೇನಿಲ್ಲದಿದ್ದರೂ ಗೀತೆಯ ಓದು-ಚರ್ಚೆ ನಾಲ್ಕು ಜನರ ಮಧ್ಯೆ ಒಂದು "ಸ್ಥಾನ-ಮಾನ" ತಂದುಕೊಡುತ್ತದೆ. ಅಷ್ಟೇಕೆ, ಭಗವದ್ಗೀತೆಯಿಂದ ಒಂದು ಸಾಲನ್ನೋ ಚರಣವನ್ನೋ ತೆಗೆದು ಕೇಳುಗರ ಮೇಲೆ ಬಿಡುವುದು ಬಹುತೇಕ ಭಾಷಣಕಾರರ ಹವ್ಯಾಸವೇ ಆಗಿದೆ. ಆದರೆ ಈ ತೆರನ ಯಾವ "ಉಪಯೋಗ"ಗಳಿಗಾಗಿಯೂ ಗೀತೆಯಬಗ್ಗೆ ಬರೆಯುವ ಇರಾದೆ ನನಗಿಲ್ಲ.
.
ತಾನು ಭಾರತದ ಬದಲಿಗೆ ರಾಮಾಯಣವನ್ನೇಕೆ ಬರೆಯಲಿಲ್ಲವೆಂಬುದಕ್ಕೆ ಕುಮಾರವ್ಯಾಸ ಕಾರಣವನ್ನು ಕೊಡುತ್ತಾನೆ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ." ರಘುವರನ ಚರಿತೆಯಲ್ಲಿ ಕಾಲಿಡಲೂ ತೆರಪಿರಲಿಲ್ಲವಂತೆ! ಅದಕ್ಕೇ ಕವಿ ಭಾರತದ ಪುಣ್ಯಪ್ರಸಂಗವನ್ನೆತ್ತಿಕೊಂಡಿದ್ದು. ಆದರೆ ಈ "ಅತಿ ಭಾರ"ದ ಸಮಸ್ಯೆ ಭಾರತದ ಕವಿಗಳ ಭಾರಕ್ಕೆ ಮಾತ್ರ ಹೇಗೆ ಅನ್ವಯಿಸಲಿಲ್ಲವೋ ನನಗೆ ತಿಳಿಯದು. ತತ್ರಾಪಿ ಭಗವದ್ಗೀತೆಯ ವಿಷಯದಲ್ಲಂತೂ ಇದು ಸತ್ಯಸ್ಯ ಸತ್ಯ ಎಂದೇ ನನ್ನ ಅನಿಸಿಕೆ. ಆಚಾರ್ಯತ್ರಯರಾದ ಶಂಕರ, ರಾಮಾನುಜ, ಮಧ್ವರನ್ನೊಳಗೊಂಡು ಇಂದಿನ ತಿಲಕ್, ಗಾಂಧಿ, ನಮ್ಮ ಡಿ.ವಿ.ಜಿಯವರ ವರೆಗೂ ಅನೇಕಾನೇಕ ಜನ ಮಹಾ ಮಹಾ ಪಂಡಿತರು, ಮೇಧಾವಿಗಳು, ದಾರ್ಶನಿಕರು ಇದರ ಬಗ್ಗೆ ಹಲವೆಂಟು ತಾತ್ಪರ್ಯ, ವ್ಯಾಖ್ಯಾನ, ಟೀಕೆ-ಟಿಪ್ಪಣಿಗಳನ್ನು ರಚಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ, ಮಹದ್ಗ್ರಂಥಗಳನ್ನು ರಚಿಸಿದ್ದಾರೆ. ಅದ್ದರಿಂದ ಫಣಿರಾಯನ ತಿಣುಕಾಟಕ್ಕೆ ಮತ್ತೊಂದು ಹೊರೆಯನ್ನು ಹೇರುವ ಇರಾದೆ ನನಗಂತೂ ಇಲ್ಲ.
.
ತಮಾಷೆ ಒತ್ತಟ್ಟಿಗಿರಲಿ, ಗೀತಾರಹಸ್ಯದಂಥ ಗ್ರಂಥವೊಂದನ್ನು ಬರೆಯಲು ಬೇಕಾದ ಜ್ಞಾನ ಸಂಪತ್ತಾಗಲೀ ಬುದ್ಧಿ ಸಂಪತ್ತಾಗಲಿ, ಅಥವ ಅದನ್ನು ಬರೆಯಲೋಸುಗವೇ ಅವುಗಳನ್ನು ಗಳಿಸಿಕೊಳ್ಳುವ ಅಗತ್ಯವಾಗಲೀ ಅನುಕೂಲವಾಗಲೀ ನನ್ನಲ್ಲಿಲ್ಲ (ಆಸೆಯೇನೋ ಖಂಡಿತಾ ಇದೆ - ದುಃಖಕ್ಕೆ ಮೂಲಕಾರಣವಾಗಿ).
.
ಹಾಗಿದ್ದರೆ, ಗೀತೆಯ ಬಗ್ಗೆ ನಾನೇಕೆ ಬರೆಯುತ್ತಿದ್ದೇನೆ? ಅದು ನಾನು ಗೀತೆಯನ್ನು ಓದುವ, ಅರಗಿಸಿಕೊಳ್ಳುವ, ಓದಿನ ದಾರಿಯಲ್ಲಿ ನಾ ಕಂಡ ಆದರ ತಲೆದೂಗಿಸುವ ತರ್ಕ, ಸನ್ನಿವೇಶ ಚಿತ್ರಣ, ಒಳದನಿಗಳೇ ಮುಂತಾದ ಸ್ವಾರಸ್ಯಗಳನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವ ರೀತಿಯಷ್ಟೇ.
.
ಇದು ಗೀತೆಯ ಸಪ್ರಮಾಣ ಅನುವಾದವಲ್ಲ (ಮೊದಲಾಗಿ ಅನುವಾದವೇ ಅಲ್ಲ); ಗೀತೆಯ ವಿಶ್ಲೇಷಣೆಯೋ, ವಿಮರ್ಶೆಯೋ ಅಲ್ಲ. ಧಾರ್ಮಿಕ/ಬೌದ್ಧಿಕ/ಐತಿಹಾಸಿಕ/ಆಧ್ಯಾತ್ಮಿಕವಾದದ್ದೇನೂ ಇಲ್ಲಿ ಮುಖ್ಯವಾಗಿ ಬರುವುದಿಲ್ಲ. ಶಾಸ್ತ್ರವಿಚಾರದಲ್ಲಿ ಏನಾದರೂ ಅಂತರ್ದೃಷ್ಟಿ ಕೊಡುವ ಪ್ರಯತ್ನವೂ ಇದಲ್ಲ. ಹೆಚ್ಚೆಂದರೆ ಗೀತೆಯನ್ನು ಒಮ್ಮೆ ಆಳವಾಗಿ, "ಸರಿಯಾಗಿ" ಅಭ್ಯಸಿಸುವ ಹಟ ಮೂಡಿಸಬಹುದು, ನನ್ನಂತೆಯೇ ಇನ್ನೊಬ್ಬ ಪಾಮರ ಓದುಗನಲ್ಲಿ.
.
ಮೊದಲೇ ಹೇಳಿದಂತೆ, ಭಗವದ್ಗೀತೆಯನ್ನು ಓದುತ್ತಾ ಚಿಂತಿಸುತ್ತಾ ಹೋದಂತೆ ನನ್ನಲ್ಲಿ ಮೂಡುತ್ತಾ ಹೋಗುವ ವಿಚಾರಗಳನ್ನು ದಾಖಲಿಸುವುದಷ್ಟೇ ಸಧ್ಯದ ಉದ್ದೇಶ. ಇದು ಕೇವಲ ನನ್ನದೇ ವಿಚಾರವಾದ್ದರಿಂದ, ಇದಕ್ಕೆ ಯಾವುದೇ ಪ್ರಮಾಣವನ್ನು ನಿರೀಕ್ಷಿಸುವಂತಿಲ್ಲ. ಅಲ್ಲದೇ ಇದು ವಿಚಾರ ಲಹರಿಯಾದ್ದರಿಂದ, ವಿಚಾರಗಳ ಕ್ರಮ ಹಿಂದು-ಮುಂದಾಗಬಹುದು, ಗತಿ ಏರುಪೇರಾಗಬಹುದು, ಬಹಳಷ್ಟು ಕಡೆ ಗೀತೆಗೆ ಸಂಬಂಧಿಸಿಯೇ ಇರದ ವಿಷಯ, ಪಾತ್ರ, ಕರ್ತೃ ನುಸುಳಿ ಬರಬಹುದು. ಆದರೆ ಇವೆಲ್ಲದರ ಅಂತರ್ಗತವಾಗಿ ಗೀತೆಯ ಮೂಲ ಶ್ರುತಿ ಮಿಡಿಯುತ್ತಿರುತ್ತದೆ ಎಂದಷ್ಟು ಹೇಳಬಲ್ಲೆ.
.
ಶುಭಂ